ಮೈಸೂರು: ಗಜಪಯಣ ಆರಂಭಿಸಿ ಮೈಸೂರಿನ ಅರಣ್ಯ ಭವನಕ್ಕೆ ಬಂದಿರುವ ಭೀಮ ಹಾಗೂ ಏಕಲವ್ಯ ಆನೆಗಳು ಬೀಡುಬಿಟ್ಟ ಜಾಗದಲ್ಲೇ ತುಂಟಾಟ ನಡೆಸಿದವು. ಹುಣಸೂರು ತಾಲೂಕಿನ ವೀರನಹೊಸಳ್ಳಿಯ ಗಜಪಡೆಯ ಪೂಜೆಯೊಂದಿಗೆ 9 ದಸರಾ ಆನೆಗಳು ಅರಣ್ಯ ಭವನಕ್ಕೆ ಆಗಮಿಸಿವೆ. ವಿಶ್ರಾಂತಿಯಲ್ಲಿರುವ ಆನೆಗಳನ್ನು ಅರಣ್ಯ ಭವನದ ಸ್ಥಳದಲ್ಲಿ ಕಟ್ಟಲಾಗಿದ್ದು ಅಕ್ಕ-ಪಕ್ಕದಲ್ಲಿರುವ ಭೀಮ ಹಾಗೂ ಏಕಲವ್ಯ ಪ್ರೀತಿಯಿಂದ ಸೊಂಡಿಲು ಹಾಗೂ ದಂತದಿಂದ ಗುದ್ದಾಡಿದವು.
ಮತ್ತಿಗೋಡು ಆನೆ ಶಿಬಿರದ 25 ವರ್ಷದ ಭೀಮ, 2017ರಿಂದಲೂ ದಸರಾ ಮಹೋತ್ಸವದಲ್ಲಿ ಸಾಲಾನೆಯಾಗಿ, 2022ರಲ್ಲಿ ಪಟ್ಟದಾನೆಯಾಗಿ ಭಾಗಿಯಾಗುತ್ತಿದೆ. 2.85 ಮೀಟರ್ ಎತ್ತರ, 3.05 ಮೀಟರ್ ಉದ್ದ, 5300 ಕೆಜಿ ತೂಕ ಇರುವ ಭೀಮನನ್ನು, ಮಾವುತ ಗುಂಡು, ಕಾವಾಡಿ ನಂಜುಂಡಸ್ವಾಮಿ ನಿರ್ವಹಣೆ ಮಾಡುತ್ತಿದ್ದಾರೆ.
ಮತ್ತಿಗೋಡು ಆನೆ ಶಿಬಿರದ 40 ವರ್ಷದ ಏಕಲವ್ಯ ಎರಡನೇ ಬಾರಿಗೆ ದಸರಾ ಮಹೋತ್ಸದಲ್ಲಿ ಪಾಲ್ಗೊಳ್ಳುತ್ತಿದ್ದಾನೆ. 2.88 ಮೀಟರ್ ಎತ್ತರ, 5150 ಕೆ.ಜಿ.ತೂಕ ಇದೆ. ಈ ಆನೆಯನ್ನು ಮಾವುತ ಎಸ್. ಇದಾಯತ್, ಕಾವಾಡಿ ಸೃಜನ್ ನೋಡಿಕೊಳ್ಳುತ್ತಿದ್ದಾರೆ. ವಾಹನ ಹಾಗೂ ಪಟಾಕಿಗಳ ಶಬ್ಧಕ್ಕೆ ಇವುಗಳು ಹೆದರುವುದಿಲ್ಲ. ಭೀಮ ಹಾಗೂ ಏಕಲವ್ಯನ ಈ ಪ್ರೀತಿಯ ಗುದ್ದಾಟವು ನೋಡುಗರನ್ನು ರಂಜಿಸಿತು.
ಇದನ್ನೂ ಓದಿ: ಮೈಸೂರಿನ ಅರಣ್ಯ ಭವನದಲ್ಲಿ ದಸರಾ ಗಜಪಡೆ ರಿಲ್ಯಾಕ್ಸ್: ಆಗಸ್ಟ್ 10ಕ್ಕೆ ಅರಮನೆ ಪ್ರವೇಶ