ಹುಬ್ಬಳ್ಳಿ, ಮಂಡ್ಯ: ನೈರುತ್ಯ ರೈಲ್ವೆ, ಮೈಸೂರು ವಿಭಾಗದ ಪಾಂಡವಪುರ ರೈಲು ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸ್ಟೇಷನ್ ಮಾಸ್ಟರ್ ಒಬ್ಬರು ಸಮಯಪ್ರಜ್ಞೆಯಿಂದ ಪ್ರಯಾಣಿಕರೊಬ್ಬರ ಜೀವ ಉಳಿಸಿದ್ದಾರೆ. ಸ್ಟೇಷನ್ ಮಾಸ್ಟರ್ ಅಭಿಜಿತ್ ಸಿಂಗ್ ಅವರು ಡಿ. 13 ರಂದು ತಮ್ಮ ಅಪರೂಪದ ಎಚ್ಚರಿಕೆ, ಸಮಯೋಚಿತ ಕ್ರಮ ಮತ್ತು ಕರ್ತವ್ಯನಿಷ್ಠೆಯಿಂದ ಓರ್ವ ಪ್ರಯಾಣಿಕನ ಅಮೂಲ್ಯ ಜೀವವನ್ನು ಉಳಿಸಿದ್ದಾರೆ.
ಪಾಂಡವಪುರ ರೈಲು ನಿಲ್ದಾಣದಲ್ಲಿ ರೈಲು ಸಂಖ್ಯೆ 16219 ನಿಲುಗಡೆಯಾಗಿದ್ದ ವೇಳೆ, ಪಾಂಡವಪುರ ತಾಲೂಕಿನ ನಿವಾಸಿಯಾದ ಶಿವರಾಜು ಕಟ್ಟೇರಿ (55 ವರ್ಷ) ಅವರು ಚಲಿಸುತ್ತಿದ್ದ ರೈಲಿಗೆ ಏರುವಾಗ ಜಾರಿ ಬಿದ್ದು ಅಪಾಯಕರ ಸ್ಥಿತಿಯಲ್ಲಿ ಸಿಲುಕಿದ್ದರು. ಇದನ್ನು ಗಮನಿಸಿದ ಅಭಿಜಿತ್ ಸಿಂಗ್ ಅವರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಧೈರ್ಯ ಮತ್ತು ಚುರುಕಿನಿಂದ ಪ್ರಯಾಣಿಕರನ್ನು ರಕ್ಷಿಸಿ, ಸಂಭವಿಸಬಹುದಾದ ಭಾರಿ ಅವಘಡವನ್ನು ತಪ್ಪಿಸಿದ್ದಾರೆ. ನಂತರ ಪ್ರಯಾಣಿಕರಿಗೆ ಅಗತ್ಯ ಸಹಾಯ ಒದಗಿಸಲಾಗಿದ್ದು, ಅವರು ಸುರಕ್ಷಿತವಾಗಿ ಮರಳಿದ್ದಾರೆ.
ಪ್ರಯಾಣಿಕನ ಜೀವ ಉಳಿಸಿದ ಅಭಿಜಿತ ಸಿಂಗ್ ಅವರ ಧೈರ್ಯ ಮತ್ತು ಸಮಯೋಚಿತ ನಿರ್ಧಾರಕ್ಕೆ ಹುಬ್ಬಳ್ಳಿಯ ನೈರುತ್ಯ ರೈಲ್ವೆ ಜನರಲ್ ಮ್ಯಾನೇಜರ್ ಮುಕುಲ್ ಸರನ್ ಮಾಥುರ್ ಶ್ಲಾಘಿಸಿದ್ದಾರೆ.
ಇದನ್ನೂ ನೋಡಿ: ಚಲಿಸುತ್ತಿದ್ದ ರೈಲಿನಿಂದ ಬಿದ್ದ ಪ್ರಯಾಣಿಕ: ಮಾಜಿ ಸೈನಿಕ, ರೈಲ್ವೆ ಸಿಬ್ಬಂದಿ ಸಮಯ ಪ್ರಜ್ಞೆಯಿಂದ ವ್ಯಕ್ತಿ ಪಾರು